Monday 11 August 2014

ನಮ್ಮೋಳಗಿನ ಬಂಧನದ ಸಂಕೋಲೆಗಳನ್ನು ಬಿಡಿಸಿಕೊಂಡಾಗ   ಮಾತ್ರ   ಸ್ವಾತಂತ್ರ್ಯದ ಕಲ್ಪನೆಗೆ ಅರ್ಥಬರುತ್ತದೆ
   ಪ್ರತಿ ವರ್ಷದಂತೆ ಈ ವರ್ಷವು ನಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸನಿಹದಲ್ಲಿದ್ದೇವೆ. ಇದು ಸಹ ಅಂಕಿ-ಅಂಶದ 68 ವರ್ಷದ ಸ್ವಾತಂತ್ರ್ಯಾ ದಿನಾಚರಣೆ ಆಗಲಿದೆ. ದೇಶದ ಮೂಲೆ-ಮೂಲೆಗೂ ಈ ದಿನವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷವು ಅದೇ ಸಂಪ್ರದಾಯ ಮುಂದುವರೆಯಲಿದೆ.
  ಸ್ವಾತಂತ್ರ್ಯ ಪಡೆದು ಇನ್ನೂ ಎರಡು ವರ್ಷ ಕಳೆದರೆ, ಸುಮಾರು 7 ದಶಕಗಳು ಪೂರ್ಣಗೊಳ್ಳಲಿವೆ. 7 ದಶಕದ ಸಾಧನೆಯನ್ನು ಹಿಂದುರುಗಿ ನೋಡಿದರೆ, ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನೇತಾರರು ಇಂದು ಇದ್ದಿದ್ದರೆ ತುಂಬಾ ನೋವುಪಡುತ್ತಿದ್ದರು. ಏಕೆಂದರೆ ಅವರ ಸ್ವತಂತ್ರ್ಯ ಭಾರತದ ಕಲ್ಪನೆ ಇದಾಗಿರಲಿಲ್ಲ. ನಾವು ನಮ್ಮೋಳಗಿನ ಸಮಸ್ಯೆಗಳೊಂದಿಗೆ ಅತ್ಯಂತ ಗೊಂದಲದ ವಾತಾವರಣದಲ್ಲಿ ಬದುಕುತಿದ್ದೇವೆ. 
        ಸ್ವಾತಂತ್ರ್ಯವೆಂದರೆ ಕೇವಲ ಅದು ಬಂಧನದಿಂದ ಪಡೆದ ಮುಕ್ತಿಯಲ್ಲ. ಬಂಧನವನ್ನು ಬಿಡಿಸಿಕೊಳ್ಳಲು ಲಕ್ಷಾಂತರ ಜನರು ಹುತಾತ್ಮರಾಗಿ ಮುಂದಿನ ಪೀಳಿಗೆಯ ಉಳಿವಿಗಾಗಿ ಹೋರಾಡಿರುವುದು.
    ಈ ಮಹಾತ್ಮರು ತಂದುಕೊಟ್ಟ ಸ್ವತಂತ್ರ್ಯವನ್ನು ಇಂದು ನಮ್ಮಲ್ಲಿ ಜವಾನನಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ಲಂಚಾವತಾರದಲ್ಲಿ ಸ್ವತಂತ್ರ್ಯರೇ, ಇನ್ನೂ ರಾಜಕಾರಣಿಗಳ ಕುರಿತು ಹೇಳಲು ಅಸಹ್ಯವೆನಿಸುತ್ತದೆ. ನಮ್ಮ ಕಾನೂನಿನ ವ್ಯವಸ್ಥೆಯನ್ನು ಊಹಿಸಿದರೆ ಸ್ವತಂತ್ರ್ಯವನ್ನು ನಾವು ಯಾವ ರೀತಿಯಲ್ಲಿ ಬಳಸಿಕೊಳ್ಳತ್ತಿದ್ದೇವೆಯೆಂದರೇ ಕೆಲವರನ್ನು ಅಪರಾಧಿ ಎಂದು ತಿಳಿದರೂ ಅವರಿಗೆ  ಕೋಟಿಗಟ್ಟಲೇ  ಖರ್ಚುಮಾಡಿ ರಕ್ಷಿಸಿಡುವ ಸಂದರ್ಭ ಒದಗಿ ಬರುತ್ತದೆ.
    ಇಂದು ನಮ್ಮ ದೇಶದಲ್ಲಿ ಸಮಸ್ಯೆಗಳನ್ನು ಪಟ್ಟಿಮಾಡುತ್ತಾ ಹೋದರೆ ನೂರಾರು, ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತೀಯತೇ, ರೈತರ ಆತ್ಮಹತ್ಯೆ, ಅತ್ಯಾಚಾರ ಪ್ರಕರಣಗಳು, ಬಯೋತ್ಪಾದನೆ, ದೇಶಿಕೈಗಾರಿಕೆಗಳ ನಾಶ……………….ಹೀಗೆ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಾತಂತ್ರ್ಯ ಪಡೆದು ಇಷ್ಟುವರ್ಷಗಳಾದರೂ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ ಬದಲು ಇನ್ನೂ ಹೆಚ್ಚಿನ ಸಮಸ್ಯೆಗಳು ಉದ್ಬವವಾಗಲು ಕಾರಣವಾದರೂ ಏನು ತಿಳಿಯದಾಗಿದೆ. ದೇಶವನ್ನು ಮುನ್ನಡೆಸಲು ಸಂಸ್ಕಾರಯುತ ನಾಯಕರ ಕೊರತೆ ಎದ್ದು ಕಾಣುತ್ತಿದೆ.
    ನಮ್ಮ ದೇಶವು ಇಡೀ ವಿಶ್ವಕ್ಕೆ ತೋರಿಸಿದ ಸಾಂಸ್ಕೃತಿಕ ಮತ್ತು ಸಾಮಾಜಿಕ, ನೈತಿಕ ಮೌಲ್ಯಗಳು ಇಂದು ಎಲ್ಲಿ ಹೋಗಿವೆ, ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿ ನಮ್ಮ ಸಂಸ್ಕೃತಿಯ ವಿನಾಶಕ್ಕೆ ನಾವೇ ಕಾರಣೀಭೂತರಾಗಿರುವುದು ಒಂದು ದುರಂತವೇ ಸರಿ. ಇಂದು ನಾವು ಆರ್ಥಿಕ ದೀವಾಳಿತನಕ್ಕಿಂತ ನೈತಿಕವಾಗಿ ಅದಃಪತನ ಹೊಂದಿದ್ದೇವೆ. ಧಾರ್ಮಿಕ ಸಂಸ್ಥೆಗಳು ಸಹ ಇಂದು ತಮ್ಮ ಮೂಲ ಸ್ವರೂಪವನ್ನು ಬದಲಾಯಿಸುತ್ತಾ ಸಾಗಿವೆ.
    ಇಂದು ಸ್ವತಂತ್ರ್ಯ ದಿನಾಚರಣೆಯನ್ನು ಕೇವಲ ಹಬ್ಬವಾಗಿ ಆಚರಿಸಲಾಗುತ್ತಿದೆ. ಅದು ಕೇವಲ ಆಗಸ್ಟ್ 15 ರಂದು ಮಾತ್ರ ನೆನಪಾಗುತ್ತದೆ. ಅಂದು ಕೇವಲ ಒಂದು ಕಾರ್ಯಕ್ರಮವನ್ನು ಆಚರಿಸುತ್ತೇವೆ. ಇಂತಹ ಕಾರ್ಯಕ್ರಮಗಳಲ್ಲಿ ದೇಶದ ಮುಖಂಡರುಗಳು ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡುತ್ತಾರೆ. ಅವರು ಹೇಳುವ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
    ಲಕ್ಷಾಂತರ ಜನರು ಜೀವತೆತ್ತುಗಳಿಸಿದ ಸ್ವಾತಂತ್ರ್ಯದ ಕಲ್ಪನೆ ಹೇಗಿದೆ? ಸ್ವಾತಂತ್ರ್ಯಾನಂತರ 68 ವರ್ಷಗಳು ನಡೆದುಬಂದ ಹಾದಿಗೆ ಪ್ರಸಕ್ತ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನೂ ನೆನೆದರೆ ನೋವಾಗುತ್ತದೆ. ಇದು ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯವರು ಮತ್ತೊಂದು ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಾಗುತ್ತದೆ.
    ಒಟ್ಟಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ನಮ್ಮ ಭಾರತದ ಅತ್ಯಂತ ಶ್ರೇಷ್ಠ ಸಂಸ್ಕೃತಿ, ಧಾರ್ಮಿಕ ಕಲ್ಪನೆಗಳು ನಶಿಸಲಿವೆ. ಅವುಗಳನ್ನು ಉಳಿಸಲು ಪ್ರತಿಯೊಬ್ಬರು ಪಣ ತೊಡಬೇಕಾಗಿದೆ. ಕೇವಲ ಆಚರಣೆಯಾಗಿ ಸ್ವಾತಂತ್ರ್ಯ ದಿನವನ್ನೂ ಆಚರಿಸದೇ ಆ ದಿನವನ್ನು ನಮ್ಮ ಮಹಾನ್ ನಾಯಕರ ಸ್ವಾತಂತ್ರ್ಯ ಭಾರತದ ಕಲ್ಪನೆಯನ್ನು ಸಕಾರಗಳಿಸುವತ್ತ ಹೆಜ್ಜೆಹಾಕಬೇಕಾಗಿದೆ.                                                                                                                                                                                                                                                      NDG